ನಗರೀಕರಣ ಪ್ರಕ್ರಿಯೆಯು ಸಮುದಾಯದ ಏಳಿಗೆಗೆ ಪೂರಕ!

ನಗರೀಕರಣ ಪ್ರಕ್ರಿಯೆಯು ಸಮುದಾಯದ ಏಳಿಗೆಗೆ ಪೂರಕವಾಗಿದ್ದು, ನಗರೀಕರಣದಿಂದ ಎಲ್ಲರನ್ನೊಳಗೊಂಡ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದೆ. ಇದನ್ನು ಇತ್ತೀಚೆಗೆ ನೀತಿ ಆಯೋಗ ಪ್ರಕಟಿಸಿದ ‘ಬಹು ಆಯಾಮದ ಬಡತನ ಸೂಚ್ಯಂಕ’ (Multidimensional poverty index) 2021 ವರದಿಯು ಸ್ಪಷ್ಟಪಡಿಸುತ್ತಿದೆ. ಈ ಹಿನ್ನಲೆಯಲ್ಲಿ ನಗರೀಕರಣ ಹಾಗು ಜನರ ಏಳಿಗೆಯ ನಡುವಿನ ಸಂಬಂಧವನ್ನು ಕೂಲಂಕುಷವಾಗಿ ವಿಮರ್ಶಿಸುವುದಾದರೆ, ಕೈಗಾರಿಕೀಕರಣ, ಆಧುನೀಕರಣ, ಜಾಗತೀಕರಣದ ಕೂಸಾಗಿ ಬೆಳೆದ ನಗರಗಳು ಗ್ರಾಮೀಣ ಪ್ರದೇಶದ ಕೃಷಿಯಾಧಾರಿತ ಸಂಪ್ರದಾಯಬದ್ಧ ಅರ್ಥ ವ್ಯವಸ್ಥೆಗೆ ಬದಲಾಗಿ ಕೈಗಾರಿಕೆ ಮತ್ತು ಸೇವಾಧಾರಿತ ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅಲ್ಲದೇ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಿನ್ನವಾದ ಉದಾರವಾದಿ ತತ್ವದ ಹಿನ್ನಲೆಯಲ್ಲಿ ಅಭಿವೃದ್ಧಿಯ ಪಥದಲ್ಲಿ ನಾಗಾಲೋಟದಲ್ಲಿ ಸಾಗುತ್ತಿದೆ. ಈ ಬದಲಾವಣೆಯು ಕಳೆದ ಎರಡು ದಶಕಗಳಲ್ಲಿ ಅಧಿಕವಾಗಿದ್ದು, ಜನರನ್ನು ಗ್ರಾಮೀಣ ಪ್ರದೇಶದಿಂದ ತನ್ನತ್ತ ಸೆಳೆಯುತ್ತಿದೆ.
ವಿಫುಲವಾದ ಕೌಶಲ್ಯಾಧಾರಿತ/ಕೌಶಲ್ಯೆತರ ಉದ್ಯೋಗಾವಕಾಶಗಳು, ಮೂಲಸೌಕರ್ಯಗಳು, ಶಿಕ್ಷಣ, ಅರೋಗ್ಯ, ಬ್ಯಾಂಕಿಂಗ್/ಹಣಕಾಸು ಸೇವೆಗಳು, ಸುಧಾರಿತ ಜೀವನ ಶೈಲಿ ವಲಸೆಗೆ ಪ್ರಮುಖ ಕಾರಣವಾಗಿದ್ದು 2011 ರ ಜನಗಣತಿಯ ಪ್ರಕಾರ ದೇಶದಲ್ಲಿ 7.8 ಕೋಟಿ ಜನರು ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದಿದ್ದಾರೆ. 2010ಕ್ಕೆ ಹೋಲಿಸಿದಲ್ಲಿ ಈ ಪ್ರವೃತ್ತಿ ಸು. 50%ರಷ್ಟು ಏರಿಕೆಯಾಗಿದೆ. ಅದರಲ್ಲೂ ಮುಂಬೈ, ಸೂರತ್, ಪುಣೆ, ಬೆಂಗಳೂರು, ಅಹಮದಾಬಾದ್ ನಗರಗಳಿಗೆ ಲಕ್ಷಕ್ಕೂ ಹೆಚ್ಚು ಜನರು ವಲಸೆ ಬಂದಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಗುರುತಿಸುವಾಗ ಭಾರತೀಯ ಜನಗಣತಿಯು ಜನಸಂಖ್ಯೆ, ಸಾಂದ್ರತೆ ಮತ್ತು ಉದ್ಯೋಗವನ್ನು ಆಧರಿಸುತ್ತದೆ. ನಗರದಲ್ಲಿನ ಹೆಚ್ಚಿನ ಜನಸಂಖ್ಯೆ, ಕೃಷಿಯೇತರ ಚಟುವಟಿಕೆಗಳು ಆರ್ಥಿಕ ಸ್ವಾಲಂಭನೆಗೆ ಪೂರಕವಾಗಿದ್ದು, ಕೋಟ್ಯಂತರ ಜನರ ಬಡತನವನ್ನು, ಹಸಿವನ್ನು ನೀಗಿಸಿದೆ. ಆದರೆ ‘ಬಡತನ’ ಎಂಬುದು ಹಣಕಾಸಿಗೆ ಮಾತ್ರ ಸಂಬಂಧಿಸಿದುದಲ್ಲ. ಶಿಕ್ಷಣ, ಆರೋಗ್ಯ, ಜೀವನದ ಗುಣಮಟ್ಟ ಒಂದಕ್ಕೊಂದು ಬೆಸೆದುಕೊಂಡಿದೆ. ನೀತಿ ಆಯೋಗದ ಸೂಚ್ಯಂಕವು ಈ ಎಲ್ಲ ಆಯಾಮಗಳನ್ನು ಒಳಗೊಂಡಿದ್ದು, ಆ ಪ್ರಕಾರ ದೇಶದ ಗ್ರಾಮೀಣ ಪ್ರದೇಶದ ಬಡತನ ದರಕ್ಕೂ (37.75%), ನಗರ ಪ್ರದೇಶದ ಬಡತನ ದರಕ್ಕೂ (8.81%) ಇರುವ ಅಂತರ ಜನರ ಏಳಿಗೆಗೆ ನಗರೀಕರಣದ ಮಾರ್ಗೋಪಾಯವನ್ನು ಬೆಂಬಲಿಸುತ್ತಿದೆ.
ನಗರೀಕರಣ ಎಂಬುದು ಒಂದು ನಗರ ಪ್ರದೇಶದ ಸಾಪೇಕ್ಷ ಬೆಳವಣಿಗೆಯ ಪ್ರಕ್ರಿಯೆ. ಒಂದು ನಗರ ವ್ಯವಸ್ಥೆಯಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅಗಾಧವಾದ ಅವಕಾಶಗಳಿರುತ್ತವೆ. ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕಾಗಿ ಹಿಂದುಳಿದ ಬಡತನದ ಬೇಗೆಯಲ್ಲಿ ಬಳಲುತ್ತಿರುವರಿಗೂ ಆತ್ಮಸ್ಥೈರ್ಯ, ಜೀವನಸ್ಫೂರ್ತಿ, ವಿಶ್ವಾಸವನ್ನು ನಗರ ತುಂಬಿಕೊಡುತ್ತದೆ. ಕರ್ನಾಟಕ ರಾಜ್ಯವನ್ನೇ ನಿದರ್ಶನವಾಗಿ ನೋಡುವುದಾದರೆ ಅತಿ ಹೆಚ್ಚು ನಗರೀಕರಣಗೊಂಡ ಜಿಲ್ಲೆಯಾದ (90.94%ರಷ್ಟು ನಗರವಾಸಿಗಳಿರುವ) ಬೆಂಗಳೂರು ಜಿಲ್ಲೆಯು 2.31% ಬಡತನ ದರ ಹೊಂದಿದ್ದು ರಾಜ್ಯದ ಸರಾಸರಿ(13.16%) ಗಿಂತ ಉತ್ತವಾಗಿದೆ. ಜಿಲ್ಲಾವಾರು ನಗರ-ಗ್ರಾಮೀಣ ಅಂಕಿಅಂಶಗಳಲ್ಲೂ ಈ ವ್ಯತ್ಯಾಸವು ಪ್ರಖರವಾಗಿ ಗೋಚರಿಸುತ್ತದೆ. ಉದಾಹರಣೆಗೆ, ಯಾದಗಿರಿ ಹೆಚ್ಚಿನ ಬಡತನ ಹೊಂದಿರುವ ಜಿಲ್ಲೆಯಾಗಿದ್ದರೂ, ಅಲ್ಲಿನ ಗ್ರಾಮೀಣ ಬಡತನ 48.37% ರಷ್ಟಿದ್ದರೆ ನಗರ ಬಡತನ 20.24%ರಷ್ಟಿದೆ.
2030ರ ವೇಳೆಗೆ ದೇಶದ ಜನಸಂಖ್ಯೆ 40% ರಷ್ಟು ನಗರಗಳಲ್ಲಿ ವಾಸಿಸುವ ನಿರೀಕ್ಷೆಯಿದ್ದು ಇದಕ್ಕೆ ತಕ್ಕುದಾದ ಯೋಜಿತ, ಕ್ರಮಬದ್ಧ, ಸುಸ್ಥಿರ ನಗರಗಳ ಅಭಿವೃದ್ಧಿ ನಮ್ಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ನಗರೀಕರಣವನ್ನು ಹಲವು ಆಯಾಮಗಳಲ್ಲಿ ಕೈಗೊಳ್ಳಬಹುದು.
ಮೊದಲನೆಯದಾಗಿ, ಪ್ರಸ್ತುತ ದೇಶದಲ್ಲಿರುವ ಮಹಾನಗರಗಳ ಸುಸ್ಥಿರ ಅಭಿವೃದ್ಧಿ- ನಮ್ಮಲ್ಲಿ ನಗರೀಕರಣ ಪ್ರಕ್ರಿಯೆಯು ಸಮಾನವಾಗಿ ಹಂಚಿಕೆಯಾಗಿರದೆ ಕೆಲವೇ ಕೆಲವು ಪಟ್ಟಣಗಳಿಗೆ ಕೇಂದ್ರಿತವಾಗಿದೆ. ಕರ್ನಾಟಕದಲ್ಲಿ 70% ನಗರ ಜನಸಂಖ್ಯೆ ಕೇವಲ 10% ಪಟ್ಟಣಗಳಲ್ಲಿದ್ದು ಅದರಲ್ಲೂ ಬೆಂಗಳೂರಿನದ್ದೇ ಸಿಂಹಪಾಲು. ಇದು ನಗರದ ಮೂಲಸೌಕರ್ಯಗಳ ಮೇಲೆ ಒತ್ತಡ ಹೆಚ್ಚಿಸುವುದರೊಂದಿಗೆ ಕೊಳಗೇರಿಗಳ ಬೆಳವಣಿಗೆ, ಅಧಿಕ ಸಂಚಾರ ದಟ್ಟಣೆ, ಮಾಲಿನ್ಯ ಮುಂತಾದ ನಕಾರಾತ್ಮಕ ಪರಿಣಾಮಗಳನ್ನುಂಟುಮಾಡುತ್ತಿದೆ. ಆದ್ದರಿಂದ, ಇಂತಹ ನಗರಗಳು ಹೆಚ್ಚುತ್ತಿರುವ ಜನಸಂಖ್ಯೆಯನ್ನು ತಡೆದುಕೊಳ್ಳುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸುವತ್ತ ಗಮನಹರಿಸಬೇಕು. ಸ್ಮಾರ್ಟ್ ಸಿಟಿ, ಅಮೃತ್, ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳು ಈ ದಿಸೆಯಲ್ಲಿ ಸಹಕಾರಿ.
ಎರಡನೆಯದಾಗಿ, 2 ಮತ್ತು 3ನೇ ಹಂತದ (tier 2 & tier 3) ನಗರಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿ – ಸಾಮರ್ಥ್ಯವನ್ನು ಮೀರಿ ಬೆಳೆಯುತ್ತಿರುವ ನಗರಗಳ ಒತ್ತಡ ಕಡಿಮೆ ಮಾಡಲು, ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸಲು 2 ಮತ್ತು 3ನೇ ಹಂತದ ನಗರಗಳಲ್ಲಿ ಯೋಜಿತ ಅಭಿವೃದ್ಧಿ ಸಾಧಿಸಬೇಕು. ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗದಂತಹ ನಗರಗಳತ್ತ ಯೋಜನೆಗಳು ಮುಖಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ 2020-2025 ‘ಮಾಹಿತಿ ತಂತ್ರಜ್ಞಾನ ನೀತಿ’ ಉತ್ತಮ ನಿದರ್ಶನವಾಗಿದ್ದು ಬೆಂಗಳೂರೇತರ ನಗರಗಳಲ್ಲಿ ಐಟಿ ಉದ್ಯಮ ಬೆಳವಣಿಗೆಗೆ ಪೂರಕವಾಗಿದೆ. ಇಂತಹ ಯೋಜನೆಗಳಿಂದ ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಸಾಧ್ಯವಿದ್ದು ಸಾಕಷ್ಟು ನಗರಗಳು ಬೆಳವಣಿಗೆ ಹೊಂದಿ, ತನ್ನ ಹಾಗು ತನ್ನ ಸುತ್ತಲಿನ ಜನಜೀವನ್ನು ಸುಧಾರಿಸುತ್ತದೆ.

ಮೂರನೆಯದಾಗಿ, ನಗರ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ- ಕೃಷಿಯೇತರ ಚಟುವಟಿಕೆಗಳಲ್ಲಿ ಅವಕಾಶ ಸೃಷ್ಟಿ, ಉತ್ತಮ ಶಿಕ್ಷಣ & ಆರೋಗ್ಯ ಸೌಲಭ್ಯ, ಸಾರಿಗೆ ವ್ಯವಸ್ಥೆ, ನೈರ್ಮಲ್ಯ, ಡಿಜಿಟಲ್ ಸಾಕ್ಷರತೆ, ಕೌಶಲ್ಯ ಅಭಿವೃದ್ಧಿಯ ಮೂಲಕ ಜೀವನ ಮಟ್ಟ ಸುಧಾರಿಸಿ ಆರ್ಥಿಕವಾಗಿ ಸದೃಢ, ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವುದು. ಇದು ಗ್ರಾಮೀಣ ಭಾಗಗಳಿಗೆ ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿಯೂ ಸಹಕಾರಿಯಾಗುತ್ತದೆ. ಇಂತಹ ಗ್ರಾಮಗಳು ಕಾಲಾನುಕ್ರಮದಲ್ಲಿ ಉತ್ತಮ ನಗರಗಳಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. 2016 ರಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲದಡಿಯಲ್ಲಿ ಆರಂಭವಾದ ‘ಶ್ಯಾಮ್ ಪ್ರಸಾದ್ ಮುಖರ್ಜಿ ರೂರ್ಬನ್ ಮಿಷನ್’ ಈ ಹಿನ್ನಲೆಯಲ್ಲಿ ಒಂದು ಮಹತ್ವದ ಯೋಜನೆಯಾಗಿದೆ.
ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಯಲ್ಲಿ ವಿಶ್ವಸಂಸ್ಥೆಯ 2021ರ ವರದಿಯ ಪ್ರಕಾರ, ಶೂನ್ಯ ಹಸಿವು (SDG – 2), ಲಿಂಗ ಸಮಾನತೆ (SDG-5) ಮತ್ತು ಮೂಲಸೌಕರ್ಯ ನಿರ್ಮಾಣ, ಸುಸ್ಥಿರ ಕೈಗಾರಿಕೀಕರಣ, ಎಲ್ಲರನ್ನೊಳಗೊಂಡ ಅಭಿವೃದ್ಧಿ (SDG-9) ಅಂಶಗಳು ದೇಶಕ್ಕೆ ಸವಾಲಾಗಿದೆ ಎಂಬುದನ್ನು ಗಮನಿಸಿದಾಗ ವೈಜ್ಞಾನಿಕ, ಯೋಜಿತ, ಉತ್ತಮ ನಗರಗಳ ಬೆಳವಣಿಗೆ ಈ ಸವಾಲಿಗೆ ಉತ್ತರ ನೀಡಬಲ್ಲದಾಗಿದ್ದು, ಅಂತಹ ಸಾಮರ್ಥ್ಯವುಳ್ಳ ನಗರಗಳ ಅಭಿವೃದ್ಧಿಯಲ್ಲಿ ದೇಶದ ಜನರ ಪ್ರಗತಿ ಸಾಧ್ಯವಿದೆ.