Manjunath Raju

BBMP Corporator

Kadu Malleshwara Ward, Bengaluru

0

No products in the cart.

Manjunath Raju

BBMP Corporator

Kadu Malleshwara Ward, Bengaluru

Blog Post

ತಂತ್ರಜ್ಞಾನದ ಬೆಳಕಿನಲ್ಲಿ ಸ್ಮಾರ್ಟ್ ಸಿಟಿಯ ಅನಾವರಣ

December 6, 2021 Uncategorized
ತಂತ್ರಜ್ಞಾನದ ಬೆಳಕಿನಲ್ಲಿ ಸ್ಮಾರ್ಟ್ ಸಿಟಿಯ ಅನಾವರಣ

ಇತಿಹಾಸದ ಪುಟಗಳನ್ನು ತೆರೆದಾಗ ಸುಮಾರು 5000 ವರ್ಷಗಳಷ್ಟು ಹಿಂದಿನ ಸಿಂಧೂ ನಾಗರೀಕತೆ ನಮ್ಮನ್ನು ವಿಸ್ಮಿತಗೊಳಿಸುತ್ತದೆ. ಅಂದಿನ ಸುಸಜ್ಜಿತ ನಗರ ಯೋಜನೆ, ವಸತಿ ವ್ಯವಸ್ಥೆ, ನಗರದ ಎಲ್ಲ ಭಾಗಗಳನ್ನು ಸಂಪರ್ಕಿಸುವ ರಸ್ತೆಗಳು, ಬೀದಿ ದೀಪಗಳು, ವೈಜ್ಞಾನಿಕವಾಗಿ ನಿರ್ಮಿಸಲ್ಪಟ್ಟ ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ ನೈರ್ಮಲ್ಯಕ್ಕೆ ನೀಡಿದ್ದ ಪ್ರಾಶಸ್ತ್ಯ, ಸಂಪನ್ಮೂಲ ನಿರ್ವಹಣೆ ಇತ್ಯಾದಿಗಳನ್ನು ಗಮನಿಸಿದಾಗ ಅದು ಇಂದಿಗೂ ಪ್ರಸ್ತುತ ಎನಿಸದಿರದು. ಸಾವಿರಾರು ವರ್ಷಗಳ ಹಿಂದಿನ ನಗರವೇ ಇಷ್ಟು ವ್ಯವಸ್ಥಿತವಾಗಿತ್ತೆಂದಾಗ ವಿಜ್ಞಾನ ತಂತ್ರಜ್ಞಾನ ಆವಿಷ್ಕಾರಗಳು ನಾಗಾಲೋಟದಲ್ಲಿ ಸಾಗುತ್ತಿರುವ ಈ ಯುಗದಲ್ಲಿ ನಗರ ನಿರ್ಮಾಣದಲ್ಲಿ ನಾವು ಏನೆಲ್ಲಾ ಸಾಧಿಸಲು ಸಾಧ್ಯವಿದೆ ಎಂದಾಗ ‘ಸ್ಮಾರ್ಟ್ ಸಿಟಿ’ ಎಂಬ ಆಲೋಚನೆ ಕಣ್ಮುಂದೆ ಬರುತ್ತದೆ.

 ‘ಸ್ಮಾರ್ಟ್ ಸಿಟಿ’ ಎಂಬುದು ಮೂಲತಃ ತಂತ್ರಜ್ಞಾನದ ತಳಹದಿಯಲ್ಲಿ ಸಮಗ್ರ ನಗರಾಭಿವೃದ್ಧಿಯ ಮೂಲಕ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ರೂಪಿಸುವ ಒಂದು ಪರಿಕಲ್ಪನೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಜೂನ್ 2015 ರಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಲಯದಡಿಯಲ್ಲಿ ‘ಸ್ಮಾರ್ಟ್ ಸಿಟಿ’ ಯೋಜನೆ ಆರಂಭಿಸಿದೆ. 2030 ರ ವೇಳೆಗೆ ದೇಶದ ಜಿಡಿಪಿ ಗೆ ಶೇ. 75ರಷ್ಟು ಕೊಡುಗೆ ನೀಡುವ, ಶೇ. 40ರಷ್ಟು ಜನಸಂಖ್ಯೆ ವಾಸಿಸುವ ನಗರ ಪ್ರದೇಶಗಳ ಸಾಂಸ್ಥಿಕ, ಭೌತಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ದಿಸೆಯಲ್ಲಿ ಈ ಯೋಜನೆ ಒಂದು ಮಹತ್ವಕಾಂಕ್ಷಿಯ ದಿಟ್ಟ ಹೆಜ್ಜೆ.

ದೇಶದ ಪ್ರತಿಯೊಂದು ನಗರಗಳ ಬೆಳವಣಿಗೆಯನ್ನು ಗಮಸಿದಾಗ ಕಾರ್ಯತ್ಮಕವಾಗಿ ಹಾಗು ರಚನಾತ್ಮಕವಾಗಿ ವಿಭಿನ್ನವಾಗಿದ್ದು ನಗರದ ಜನಜೀವನ, ಅಭಿವೃದ್ಧಿಯ ಮಟ್ಟ, ಆರ್ಥಿಕತೆ, ಪರಿಸರ, ಮೂಲಸೌಕರ್ಯಗಳ ಅವಶ್ಯಕತೆಗಳು ಏಕಪ್ರಕಾರವಾಗಿಲ್ಲ. ಈ ಆಧಾರದಲ್ಲಿಯೇ ಸ್ಮಾರ್ಟ್ ಸಿಟಿ ಯೋಜನೆ ‘ಸ್ಮಾರ್ಟ್ ಸಿಟಿ’ ಎಂಬುದಕ್ಕೆ ಸಾರ್ವತ್ರಿಕವಾಗಿ ನಿರ್ಧಿಷ್ಟ ಮಾದರಿಯ ವ್ಯಾಖ್ಯಾನ ನೀಡದೆ, ಅದನ್ನು ಪ್ರದೇಶಾಧಾರಿತವಾಗಿಸಿದ್ದು ಕೈಗೊಳ್ಳುವ ಪ್ರತಿ ಯೋಜನೆಯು ಸ್ಥಳೀಯ ಜನರ ಆಶೋತ್ತರಗಳ ಕೈಗನ್ನಡಿ ಎಂದೇ ಹೇಳಬಹುದಾಗಿದೆ.

 5 ವರ್ಷಗಳ ಅವಧಿಗೆ ಆರಂಭವಾದ ಈ ಯೋಜನೆಯು ‘ಸಿಟಿ ಚಾಲೆಂಜ್’ ಮೂಲಕ 100 ನಗರಗಳನ್ನು ಆಯ್ಕೆ ಮಾಡಿ ಪ್ರತಿ ನಗರಕ್ಕೆ ವಾರ್ಷಿಕವಾಗಿ ಕೇಂದ್ರದಿಂದ 100 ಕೋಟಿ ಮತ್ತು ರಾಜ್ಯ, ನಗರಾಡಳಿತಗಳಿಂದ ತತ್ಸಮಾನ ಅನುಧಾನದೊಂದಿಗೆ ವಿಶೇಷ ಉದ್ದೇಶಿತ ಸಂಸ್ಥೆ(SPV)ಗಳ ಮೂಲಕ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವ ಗುರಿ ಹೊಂದಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ 7 ನಗರಗಳು ಅಂದರೆ ದಾವಣಗೆರೆ, ತುಮಕೂರು,ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು,ಬೆಂಗಳೂರು,ಬೆಳಗಾವಿ ಆಯ್ಕೆಯಾಗಿದೆ. ಪ್ರಸ್ತುತ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 1.8  ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ.

ಬಂಡವಾಳ ಹೂಡಿಕೆ ಒಂದೆಡೆಯಾದರೆ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಈವರೆಗಿನ ಅಭಿವೃದ್ಧಿ ಯೋಜನೆಗಳಿಗೂ ಭಿನ್ನವಾದ, ಉತ್ತಮ, ಸಮರ್ಥ, ಸುಸ್ಥಿರ, ತಂತ್ರಜ್ಞಾನಧಾರಿತ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ಸುಲಭದ ವಿಷಯವಲ್ಲ. ಹೆಚ್ಚುತ್ತಿರುವ ಜನಸಂಖ್ಯೆ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಅವೈಜ್ಞಾನಿಕ ನಗರ ಬೆಳವಣಿಗೆಗಳು ಯೋಜನೆಗೆ ಸವಾಲಾಗಿ ಪರಿಣಮಿಸಿದೆ. ಬೆಂಗಳೂರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಬಹು ರಾಷ್ಟ್ರೀಯ ಕಂಪನಿಗಳು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ನವೋದ್ಯಮಗಳ ಮೂಲಕ ದಿನೇದಿನೇ ಜನರನ್ನು ಆಕರ್ಷಿಸುತ್ತಿರುವ ನಗರಕ್ಕೆ ಮೂಲಸೌಕರ್ಯಗಳ ಮೇಲಿನ ಒತ್ತಡ ಹೆಚ್ಚುತ್ತಲೇ ಹೋಗುತ್ತಿದೆ.

ವಸತಿ ಸೌಲಭ್ಯ, ನೀರು ಪೂರೈಕೆ, ವಿದ್ಯುತ್ ಸರಬರಾಜು, ನಗರ ಸಾರಿಗೆ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಅರೋಗ್ಯ, ಶಿಕ್ಷಣ, ಭದ್ರತೆ ಹೀಗೆ ಹತ್ತಾರು ಸೌಲಭ್ಯ ಸೇವೆಗಳನ್ನು ಒದಗಿಸಬೇಕಾದ ನಗರ ಈ ಆಯಾಮಗಳಲ್ಲಿ ‘ಸ್ಮಾರ್ಟ್’ ಆಗುವುದು ಹೇಗೆ? ಎಂಬುದಕ್ಕೆ ಉತ್ತರ ತಂತ್ರಜ್ಞಾನ ಅಳವಡಿಕೆಯಲ್ಲಿದೆ. ಉದಾಹರಣೆಗೆ, ರಸ್ತೆ ಅಭಿವೃದ್ಧಿ ಎಂದರೆ ರಸ್ತೆ ನಿರ್ಮಾಣ, ದುರಸ್ತಿ ಅಥವಾ ಡಾಂಬರೀಕರಣ ಮಾತ್ರವಲ್ಲ; ರಸ್ತೆಗೆ ಹೊಂದಿಕೊಂಡಂತೆ ಒಳಚರಂಡಿ ವ್ಯವಸ್ಥೆ, ವಿದ್ಯುತ್, ಅಂತರ್ಜಾಲ ವ್ಯವಸ್ಥೆಯ ಕೇಬಲ್ಗಳು, ಬೀದಿ ದೀಪಗಳು, ನೀರಿನ ಪೈಪ್ಲೈನ್, ಹೀಗೆ ಪ್ರತಿಯೊಂದನ್ನು ಪರಿಗಣಿಸಬೇಕು. ಸ್ಮಾರ್ಟ್ ಮೀಟರಿಂಗ್, ಗ್ರಿಡ್ ಸಂಪರ್ಕಿತ ‘ಎನರ್ಜಿ ಶೇರಿಂಗ್’ ವ್ಯವಸ್ಥೆ, ಸೌರಶಕ್ತಿ ಚಾಲಿತ ಬೀದಿ ದೀಪಗಳು ಇತ್ಯಾದಿ; ಇವೆಲ್ಲವುಗಳ ಮಾಹಿತಿಯನ್ನು ಒಳಗೊಂಡ GIS ಆಧಾರಿತ ಮ್ಯಾಪಿಂಗ್ ವ್ಯವಸ್ಥೆ ರೂಪಿಸಿದಲ್ಲಿ ಯೋಜನೆ ಸಂಪೂರ್ಣ ಎನಿಸಿಕೊಳ್ಳುತ್ತದೆ. ಇಂತಹ ವ್ಯವಸ್ಥಿತ ಯೋಜನೆಗೆ ಬಿಬಿಎಂಪಿ, ನೀರು ಸರಬರಾಜು ಮಂಡಳಿ, ಬೆಸ್ಕಾಂ ಮೊದಲಾದ ಇಲಾಖೆಗಳ ನಡುವಿನ ಸಹಕಾರವು ಅಷ್ಟೇ ಮುಖ್ಯ.

ಬೆಂಗಳೂರಿನಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಸುಮಾರು 5000 ಮೆಟ್ರಿಕ್ ಟನ್ ಗಳಷ್ಟು ಘನತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ವಿಂಗಡಿಸಿ ಸಂಸ್ಕರಿಸಿ ವಿದ್ಯುತ್ ಉತ್ಪಾದನೆಯಲ್ಲಿ, ರಸ್ತೆ ನಿರ್ಮಾಣದಲ್ಲಿ , ಕಚ್ಚಾ ವಸ್ತುಗಳಾಗಿ ಬಳಕೆಮಾಡುವುದು; ಚೀನಾದ ಸ್ಪಂಜು ನಗರ(SMART STAR WATER CONTROL SYSTEM) ಯೋಜನೆ ರೂಪಿಸಿ ಬೆಂಗಳೂರಿನ ನಗರ ಪ್ರವಾಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು; ಕೃತಕ ಬುದ್ದಿಮತ್ತೆ ಆಧರಿಸಿ ಸಂಚಾರ ದಟ್ಟಣೆ ಇರುವ ಪ್ರದೇಶಗಳನ್ನು ಸಮರ್ಪಕವಾಗಿ ನಿರ್ವಹಿಸುವುದು; ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಇನ್ನಷ್ಟು ಉತ್ತಮಪಡಿಸಿ ಜನಬಳಕೆಗೆ ಉತ್ತೇಜಿಸುವುದು, ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ಅಳವಡಿಸಿಕೊಳ್ಳುವುದು, ಸೈಕಲ್ ಪಥಗಳ ನಿರ್ಮಾಣ ಇತ್ಯಾದಿಗಳ ಮೂಲಕ ಮಾಲಿನ್ಯ ಪ್ರಮಾಣ ಕಡಿತಗೊಳಿಸುವುದು; ಯಾವುದೇ ಅಹಿತಕರ ಘಟನೆ, ಅಪಘಾತ ಇತ್ಯಾದಿ ಸಂಭವಿಸಿದಾಗ AI ಆಧಾರಿತ ಸಿಸಿ ಟಿವಿಗಳು ತತ್ಕ್ಷಣ ಚಿತ್ರಣವನ್ನು ಪೊಲೀಸ್ ಕಂಟ್ರೋಲ್ ರೂಮ್ ಗೆ ರವಾನಿಸುವುದು; ನಗರದ ಪ್ರತಿಯೊಂದು ಮನೆಗಳು,  ಸರ್ಕಾರಿ/ಖಾಸಗಿ ಕಚೇರಿಗಳು, ವಸತಿ ಸಮುಚ್ಚಯಗಳು, ಇನ್ನಿತರೆ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲನ್ನು ಅಳವಡಿಸುವುದು, ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ಮೂಲಕ ನೀರಿನ ಅವಶ್ಯಕತೆ ಪೂರೈಸುವುದು; ನಗರಾಡಳಿತನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ ಒಂದೇ APP ನಲ್ಲಿ ಎಲ್ಲ ಸಾರ್ವಜನಿಕ ಸೇವೆಗಳನ್ನು ಲಭ್ಯವಾಗುವಂತೆ ಮಾಡುವುದು, ಹೀಗೆ ನಗರ ನಿರ್ಮಾಣದ ಪ್ರತಿಯೊಂದು ಅಂಶದಲ್ಲಿ ‘ಸ್ಮಾರ್ಟ್ ಸಿಟಿ’ ಯೋಜನೆಯ ಸಾಧ್ಯತೆಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.

ಅಂತೆಯೇ ಮೂಲಸೌಕರ್ಯಗಳ ನಿರ್ಮಾಣವನ್ನು ಸಾಂಪ್ರದಾಯಿಕವಾಗಿ ಕೈಗೊಳ್ಳದೇ ನಾವೀನ್ಯತೆಯನ್ನು ಅಳವಡಿಸಿಕೊಳ್ಳುವ, ಅವುಗಳ ಸಾಮರ್ಥ್ಯ, ದಕ್ಷತೆಯನ್ನು ಹೆಚ್ಚಿಸುವ ಪ್ರಯತ್ನವಾಗಬೇಕು. ಮೂಲಸೌಕರ್ಯಗಳ ನಿರ್ಮಾಣವನ್ನು ಮೀರಿದ ಯೋಜನೆಗಳು ರೂಪುಗೊಳ್ಳಬೇಕು. ಇತ್ತೀಚೆಗೆ ಸ್ಮಾರ್ಟ್ ಸಿಟಿಯಡಿಯಲ್ಲಿ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ನಿರ್ಮಿಸಲಾದ ರಸ್ತೆ, ಫುಟ್ಪಾತ್ ಗಳು ಕಳಪೆ ಕಾಮಗಾರಿ ಎಂದು ಖುದ್ದು ಬಿಬಿಎಂಪಿಯೇ ಪತ್ತೆ ಮಾಡಿತ್ತು. ಈ ರೀತಿಯ ಕಾಮಗಾರಿಗಳು ‘ಸ್ಮಾರ್ಟ್ ಸಿಟಿ’ ಪರಿಕಲ್ಪನೆಯನ್ನೇ ಬುಡಮೇಲು ಮಾಡುವಂತಹವು. ಅದಕ್ಕೆ ಅವಕಾಶ ನೀಡದೆ ಜವಾಬ್ದಾರಿಯುತವಾಗಿ ಹೊಣೆಗಾರಿಕೆಯೊಂದಿಗೆ ಯೋಜನೆ ಅನುಷ್ಠಾನಗೊಳಿಸಬೇಕು. ವಿವಿಧ ಇಲಾಖೆಗಳ ನಡುವಿನ ಸಮನ್ವಯ ಸಹಕಾರ, ಯೋಜನೆ ರೂಪಿಸುವ ಹಂತದಲ್ಲಿ ನೈಪುಣ್ಯತೆ, ದೂರದರ್ಶಿತ್ವ, ಸಾಮರ್ಥ್ಯ, ತಂತ್ರಜ್ಞಾನ ಅಳವಡಿಕೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಲ್ಲವೂ ಯೋಜನೆಯ ಯಶಸ್ಸಿಗೆ ಕಾರಣವಾಗುತ್ತದೆ.

ಬೆಂಗಳೂರು ಸ್ಮಾರ್ಟ್ ಸಿಟಿಯ ಕೋವಿಡ್ ತುರ್ತು ಪರಿಸ್ಥಿತಿ ನಿರ್ವಹಣೆ, ತುಮಕೂರು ಸ್ಮಾರ್ಟ್ ಸಿಟಿಯ ಡಿಜಿಟಲ್ ಗ್ರಂಥಾಲಯ ಯೋಜನೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಲಭಿಸಿದ್ದನ್ನು ಸ್ಮರಿಸುತ್ತಾ ಇಂತಹ ಯೋಜನೆಗಳು ಮತ್ತಷ್ಟು ಕಾರ್ಯಗತಗೊಂಡು ತನ್ಮೂಲಕ ಸಮೃದ್ಧ ಸುಸ್ಥಿರ ನಗರ ನಿರ್ಮಾಣವಾಗಿ, ದೇಶದ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಿ, ಜೀವನ ನಿರ್ವಹಣೆಯು ನಿರಾಯಾಸ ತೃಪ್ತಿದಾಯಕವಾದಲ್ಲಿ ‘ಸ್ಮಾರ್ಟ್ ಸಿಟಿ’ ಯೋಜನೆಯ ಕನಸು ನನಸಾದಂತೆ.

Write a comment